1. ಶಿವಪುರಾಣ
[ತಿರುಪೆರುಂದುರೈ ಕ್ಷೇತ್ರದಲ್ಲಿ ಅನುಗ್ರಹಿಸಿದುದು]
ಶಿವನ ಅನಾದಿಯ ಹಿರಿಮೆ
ಶ್ರೀ ಸಿಟ್ರಂಬಲಂ
ನಮಃ ಶಿವಾಯವೆಂಬ ಪಂಚಾಕ್ಷರಗಳು ಬಾಳ್ಗೆ. ಪಂಚಾಕ್ಷರಗಳ ಸಾರವಾಗಿ ಶೋಭಿಸುವ ಭಗವಂತನ ಪವಿತ್ರ ಪಾದಗಳು ಬಾಳ್ಗೆ. ಕಣ್ಣೆವೆ ಮಿಟುಕಿಸುವಷ್ಟು ಸಮಯವೂ ಭಕ್ತನ ಬಿಟ್ಟಗಲದ ಪವಿತ್ರ ಪಾದಗಳು ಬಾಳ್ಗೆ. ಕೋಗಳಿ ಎಂಬ ಸ್ಥಳದಲ್ಲಿ ನೆಲೆಸಿ ಅನುಗ್ರಹಿಸಿದ ಗುರುಮೂರ್ತಿಯ ಪವಿತ್ರಪಾದ ಬಾಳ್ಗೆ. ಶಿವಾಗಮದ ಸಾಕಾರ ರೂಪವಾಗಿ ನಿಂತು ಸುಖವ ನೀಡುವ ಭಗವಂತನ ಪವಿತ್ರ ಪಾದ ಬಾಳ್ಗೆ. ಏಕವೂ ಅನೇಕವೂ ಆದ ದೇವನ ಪವಿತ್ರ ಪಾದ ಬಾಳ್ಗೆ. (5)
ಮನೋವೇಗವ ನೀಗಿಸಿ ನನಗೆ ಆಶ್ರಯ ನೀಡಿದ ಪರಿಪೂರ್ಣನ ಪವಿತ್ರ ಪಾದಗಳು ಗೆಲ್ಗೆ. ಭವದ ಬಂಧನವ ನಾಶಗೈವ ವೀರ ಪೆಂಡೆಯ ತೊಟ್ಟ ಪವಿತ್ರ ಪಾದಗಳು ಗೆಲ್ಗೆ. ತನ್ನನ್ನು ನಮಿಸದಿರುವ ಅನ್ಯರಿಗೆ ನಿಲುಕದವನ ತಾವರೆ ಹೂವಿನಂತ ಪಾದಗಳು ಗೆಲ್ಗೆ. ಕೈ ಜೋಡಿಸಿ ನಮಿಸುವವರಿಗೆ ಸಂತಸದಿ ದಯೆಗೈವ ದೇವನ ಪವಿತ್ರಪಾದಗಳು ಗೆಲ್ಗೆ. ತಲೆ ಮೇಲೆ ಕೈಗಳ ಜೋಡಿಸಿ ನಮಿಸುವ ಶರಣರನ್ನು ಉನ್ನತ ಶಿವ ಪದದಿ ಇರಿಸುವ ಮಹಾ ಮಹಿಮನ ಪವಿತ್ರ ಪಾದಗಳು ಗೆಲ್ಗೆ. (10)
ಶಿವನ ಪವಿತ್ರ ಪಾದಗಳ ಸ್ತುತಿಸುವೆ. ನಮ್ಮ ತಂದೆಯ ಪವಿತ್ರಪಾದಗಳ ಸ್ತುತಿಸುವೆ. ತೇಜೋ ರೂಪನ ಪವಿತ್ರಪಾದಗಳ ಸ್ತುತಿಸುವೆ. ಶಿವ ಪರಮಾತ್ಮನ ಪವಿತ್ರಪಾದಗಳ ಸ್ತುತಿಸುವೆ. ಭಕ್ತರ ಪ್ರೀತಿ ಬಲೆಗೆ ಸೆಲೆಸಿಲುಕಿ ಅಚಲನಾಗಿ ನಿಂತ ನಿರ್ಮಲನ ಪವಿತ್ರಪಾದಗಳ ಸ್ತುತಿಸುವೆ. ಅಶಾಶ್ವತವಾದ ಭವವನ್ನು ನಾಶಗೈವ ಒಡೆಯನ ಪವಿತ್ರಪಾದಗಳ ಸ್ತುತಿಸುವೆ. ಶ್ರೀಪೆರುಂದುರೈಯಲ್ಲಿ ನೆಲೆಸಿ ದಯೆಗೈವ ನಮ್ಮ ದೇವನ ಪವಿತ್ರಪಾದಗಳ ಸ್ತುತಿಸುವೆ. (15)
ಎಂದಿಗೂ ಬತ್ತದ ನಿರಂತರ ಸುಖವನ್ನು ನಿಜಭಕ್ತರಿಗೆ ಪ್ರಸಾದಿಸುವ ಕರುಣಾ ಪರ್ವತನ ಸ್ತುತಿಸುವೆ. ಶಿವ ಪರಮಾತ್ಮನಾದ ದಯಾಸಾಗರನು ನನ್ನ ಮನದಲ್ಲಿ ನೆಲೆಸಿಹನು. ಅವನ ಕೃಪೆ ಯಿಂದಲೇ ಅವನ ಪವಿತ್ರ ಪಾದಗಳ ಸ್ತುತಿಸುವೆ. ಅವನ ಮನಸ್ಸಿಗೆ ಸಂತೋಷವಾಗುವಂತೆ, ಎನ್ನ ಹಿಂದಿನ ಕರ್ಮಗಳೆಲ್ಲಾ ಸವೆಯುವಂತೆ ಶಿವನ ಅನಾದಿಯ ಹಿರಿಮೆಯನ್ನು ಸ್ತುತಿಸುವೆ. (20)
ನೆತ್ತಿಯಲ್ಲಿ ಕಣ್ಣುಳ್ಳವನ ನೇತ್ರಗಳು ದಾರಿತೋರೆ ಅದೇ ಮಾರ್ಗದಿ ಸಾಗಿ ಬಂದೆ. ಮಾತಿಗೆ ನಿಲುಕದ, ಮನದಲ್ಲೂ ಕಲ್ಪಿಸಲಾಗದ ಚೆಲುವನ ಪವಿತ್ರ ಪಾದಗಳಿಗೆರಗುವೆ. ಗಗನವನಾವರಿಸಿ, ಭೂಮಿಯನಾವರಿಸಿ ಆ ಎಡೆಯೂ ಸಾಲದಾಗಲು ಅವೆಲ್ಲವನ್ನೂ ದಾಟಿ ನಿಂತವನೇ! ಸದಾ ಪ್ರಜ್ವಲಿಸುವ ಜ್ಯೋತಿ ರೂಪವಾಗಿ ನಿಂತವನೇ! ಸೀಮೆಗಳ ಮೀರಿದ ಸೀಮಾತೀತನೇ! ನಿನ್ನ ಅಪಾರ ಕೀರ್ತಿಯನ್ನು ಪಾಪಾತ್ಮನಾದ ನಾನು ಹೊಗಳಿ ಸ್ತುತಿಸುವ ಬಗೆಯ ಇನಿತೂ
ಅರಿಯೆ. (25)
ಹುಲ್ಲಾಗಿ, ಸೊಪ್ಪಾಗಿ, ಹುಳುವಾಗಿ, ಮರವಾಗಿ, ಹಲ ವಿಧದ ಪ್ರಾಣಿ ಪಕ್ಷಿಗಳಾಗಿ, ಹಾವಾಗಿ, ಕಲ್ಲಾಗಿ, ಮನುಜನಾಗಿ, ಭೂತವಾಗಿ, ಗಣಗಳಾಗಿ, ಬಲಿಷ್ಟ ಅಸುರರಾಗಿ, ಮುನಿಗಳಾಗಿ, ದೇವಾನು ದೇವತೆಗಳಾಗಿ, ಚರಾಚರಗಳೆಂಬ ಇಬ್ಬಗೆಯ ವಸ್ತುಗಳಲ್ಲೂ, (30)
ಹಲ ಬಗೆಯ ಹುಟ್ಟುಗಳಲ್ಲೂ ಬಂದು ತೊಳಲುತಿಹೆನು. ನನ್ನೊಡೆಯನೇ! ಕನಕಸದೃಶವಾದ ನಿನ್ನ ಪಾದಗಳ ಕಂಡು ನಿಜಮುಕ್ತಿಯ ಪಡೆದುಕೊಂಡೆ. ಭಕ್ತನ ಸಂಕಟವ ನೀಗಿಸಲು ಮನದಿ ನೆಲೆಸಿ ಪ್ರಾಣ ಸ್ವರೂಪನಾಗಿ ಶೋಭಿಸುವ ನಿತ್ಯನೇ! ನಿರ್ಮಲನೇ! ವೃಷಭವಾಹನನೇ! ವೇದಗಳೆಲ್ಲವೂ ‘ತಂದೆ’ ಎಂದು ಸ್ತುತಿಸುವ ಹಿರಿಮೆ, ಆಳ, ವಿಶಾಲತೆಯುಳ್ಳ ಸೂಕ್ಷ್ಮ ಸ್ವರೂಪನೇ! (35)
ಶೀತೋಷ್ಣ ಗುಣದವನೇ! ಆತ್ಮ ಸ್ವರೂಪನಾಗಿ ಶೋಭಿಸುವ ನಿರ್ಮಲನೇ! ಹುಸಿಯಾದವೆಲ್ಲವೂ ನಶಿಸಿ ಹೋಗುವಂತೆ ದಯೆಗೈದವನೇ! ಸತ್ಯಜ್ಞಾನ ಸ್ವರೂಪನಾಗಿ ಶೋಭಿಸುವ ನಿತ್ಯ ಕಾಂತಿ ಸ್ವರೂಪನೇ! ಸತ್ಯದ ಅರಿವು ಇನಿತೂ ಇಲ್ಲದ ಎನಗೆ ಮೋಕ್ಷ ಸುಖವ ಕರುಣಿಸಿದ ಶಿವಪರಮಾತ್ಮನೆ ಅಜ್ಞಾನವೆಂಬ ಮಾಯೆಯ ಕಳೆದು ಕೃಪೆಗೈದ ಪರಜ್ಞಾನ ಸ್ವರೂಪನೇ! (40)
ರೂಪ, ಎಲ್ಲೆ, ಅಂತ್ಯ ರಹಿತನೇ! ಸರ್ವಲೋಕಗಳನ್ನು ಸೃಷ್ಟಿಸುವೆ, ರಕ್ಷಿಸುವೆ, ನಾಶಗೈವೆ ದಯೆಗೈವೆ, ಭವವೆಂಬ ನೋವ ನೀಗಿಸುವೆ, ಭಕ್ತನನ್ನು ನಿನ್ನ ಕೃಪಾಕಟಾಕ್ಷದಲ್ಲಿರಿಸುವೆ. ನಿನ್ನನ್ನು ಪಡೆಯಬಯಸುವವರಿಗೆ ನೇರವಾದ ಮಾರ್ಗವ ತೋರುವವನೇ. ನಿನಗೆ ಎರಗದವರಿಗೆ ದೂರನಾದವನೇ! ನಿನ್ನ ಭಕ್ತರಿಗೆ ಸಮೀಪನಾದವನೇ! ಮಾತಿಗೆ, ಮನಸ್ಸಿಗೆ ನಿಲುಕದ ಗೂಡಾರ್ಥನೇ. (45)
ಕರೆದ ಹಾಲಿಗೆ ಕಬ್ಬಿನರಸ, ತುಪ್ಪ, ಸಕ್ಕರೆ ಸೇರಿಸಿದಂತೆ ಪ್ರೀತಿಪಾತ್ರರ ಮನದಲ್ಲಿ ಜೇನಿನಂತೆ ಸವಿಯಾಗಿ ನೆಲೆಸಿ, ಎನ್ನ ಭವಗಳನ್ನೆಲ್ಲಾ ನೀಗಿಸುವ ಪರಮಾತ್ಮನೇ! ಸೃಷ್ಟಿ ಮೊದಲಾದ ಪಂಚಕಾರ್ಯಗಳಿಗೆ ಕಾರಣಕರ್ತನಾದ ಪಂಚಾಕ್ಷರನೇ! ದೇವಗಣಗಳು ಸ್ತುತಿಗೈಯುತ್ತಿರೆ ಅವರಿಗೆ ಗೋಚರಿಸದಂತೆ ಅಗೋಚರನಾದವನೇ! ನಮ್ಮ ಒಡೆಯನೇ ಪಾಪಕರ್ಮನು ನಾನು (50)
ನನ್ನನ್ನು ಮರೆಮಾಚಿ ಆವರಿಸಿರುವ ಮಾಯಾ ಮಲಗಳು ಅಜ್ಞಾನ, ಪಾಪಗಳೆಂಬ ಪಾಶದಲ್ಲಿ ಬಂಧಿಸಿವೆ. ಹೊರಗೆ ಚರ್ಮವನ್ನು ಹೊದಿಸಿಕೊಂಡು, ಎಲ್ಲೆಡೆ ತುಂಬಿರುವ ಕ್ರಿಮಿಗಳನ್ನು, ಹೊಲಸನ್ನು ಮರೆಮಾಚಿದ, ಮಲವು ಸುರಿವ ನವದ್ವಾರಗಳುಳ್ಳ ದೇಹವೆಂಬ ಗುಡಿಸಲು ನೆಲೆತಪ್ಪುವಂತೆ ಪಂಚೇಂದ್ರಿಯಗಳು ವಂಚಿಸುತ್ತಿವೆ. (55)
ಹಾಗಾಗಿ ಮೃಗೀಯ ಮನಸ್ಸು ನಿನ್ನಿಂದ ದೂರವಾಗುತ್ತಿದೆ. ನಿರ್ಮಲನೇ ನಿನಗಾಗಿ ಹಾತೊರೆಯುವಂತಹ ನನಗಾಗಿ ಮನಕರಗಿ ದಯಗೈದೆ. ಭುವಿಗಿಳಿದು ಬಂದು ನಿನ್ನ ಪವಿತ್ರ ಪಾದಗಳ ದರ್ಶಿಸಿದೆ. ನಾಯಿಗಿಂತ ಕೀಳಾದ ಕಿಂಕರನಿಗೆ ಕೃಪೆ ತೋರಿದೆ. (60)
ತಾಯಿಗಿಂತಲೂ ಮಿಗಿಲಾದ ದಯೆತೋರಿದ ಸತ್ಯ ಶೀಲನೇ! ನಿಷ್ಕಳಂಕ ಕಾಂತಿ ಸೂಸುವ ಅಗಾಧ ಕಾಂತಿ ಸ್ವರೂಪನೇ! ಕೀರ್ತಿಯಿಂದ ಶೋಭಿಸುತ್ತಿರುವವನೇ! ಜೇನಿಗಿಂತ ಸವಿಯಾದ ಗುಣದವನೇ! ಪ್ರಿಯವಾದ ದೈವಾಮೃತವೇ! ಕೈಲಾಸದಲ್ಲಿ ನೆಲೆಸಿ ದಯೆಗೈದವನೇ! ಬಂಧ-ಪಾಶಗಳ ಸಂಬಂಧವ ಕತ್ತರಿಸಿ ರಕ್ಷಿಸುವ ಆಚಾರ್ಯನೇ. ಪ್ರೀತಿಯಿಂದ ಕೃಪೆದೋರಿ ನನ್ನ ಮನದ ವಂಚನೆಗಳ ನಾಶಪಡಿಸಿದವನೆ. (65)
ನಿತ್ಯ ನಿರಂತರ ದಯಾಸಾಗರನೇ! ಸವಿದಷ್ಟೂ ಸವಿಯ ಬೇಕೆನಿಸುವ ಅಮೃತ ಸದೃಶನೇ. ಅಪಾರ ಮಹಿಮಾ ಶೀಲನೇ! ಕಂಡರಿಯದವರ ಮನದಲ್ಲಿ ಅಗೋಚರವಾಗಿ ನಿಂತ ತೇಜೋ ಮೂರ್ತಿಯೇ! ಎನ್ನ ಮನವ ನೀರಿನಂತೆ ಕರಗಿಸಿ ಪ್ರಾಣವಾಯುವಾಗಿ ನಿಂತವನೇ! ಸುಖದುಃಖಾತೀತನೇ. (70)
ಪ್ರೀತಿಪಾತ್ರರಲ್ಲಿ ಪ್ರೀತಿಯುಳ್ಳವನೇ! ಭಕ್ತರಲ್ಲಿ ಅಪಾರವಾದ ಕರುಣೆಯುಳ್ಳವನೇ ಎಲ್ಲಾ ವಸ್ತುಗಳಾಗಿ, ಯಾವುದೂ ಆಗದ ಕಾಂತಿಸ್ವರೂಪನೇ! ಕಾರ್ಗತ್ತಲ ಸ್ವರೂಪನೇ! ಅರಿವಿಗೆ ನಿಲುಕದ ಮಹಾಮಹಿಮನೇ! ಸಕಲ ಬ್ರಹ್ಮಾಂಡಕ್ಕೂ ಆದಿಯಾದವನೇ! ಅಂತ್ಯವಾಗಿ, ಮಧ್ಯವಾಗಿ, ಯಾವುದೂ ಆಗದೆ ಸರ್ವವ್ಯಾಪಿಯಾದವನೆ. ನನ್ನನ್ನು ನಿನ್ನೆಡೆಗೆ ಸೆಳೆದು ಆಳ್ಗೊಂಡು ದಯೆಗೈವ ತಂದೆಯೇ! ಸತ್ಯಜಾ್ಞನದಿಂದ ಪರೀಕ್ಷಿಸಿದ ಅರಿವುಳ್ಳವರ ಅಭಿಪ್ರಾಯದಂತೆ. (75)
ನೋಡಲಸದಳವಾದ ನೋಟವೇ! ಸೂಕ್ಷ್ಮದೃಷ್ಟಿಗೆ ಕಾಣಲಾಗದ ಅತಿಸೂಕ್ಷ್ಮರೂಪನೇ ಸೃಷ್ಟಿ, ಲಯಗಳಿಗತೀತನಾದ ಪುಣ್ಯಸ್ವರೂಪನೇ. ನಮ್ಮನ್ನು ರಕ್ಷಿಸುವ ಒಡೆಯನೇ! ನೋಟಕ್ಕೆ ನಿಲುಕದ ಮಹಾಕಾಂತಿಯೇ! ಮಹಾನದಿಯಂತ ಸುಖದಾಯಕನೇ! ನಮ್ಮ ಒಡೆಯನೇ ತಂದೆಯೇ. (80)
ಶಾಶ್ವತವಾದ ತೇಜೋ ಮೂರ್ತಿಯಾಗಿ, ವರ್ಣಿಸಲಾಗದಷ್ಟು ಸೂಕ್ಷ್ಮವಾದ ಅರಿವಾಗಿ ಬದಲಾಗಿ ಭೂಮಿಯಲ್ಲಿ ನಾನಾ ವಸ್ತುಗಳಾಗಿ ತೋರಿದವನೇ. ಅರಿವಿನಿಂದ ಮಾತ್ರ ಅರಿಯಬಹುದಾದಂತಹ ಸ್ಪಷ್ಟಾತಿ ಸ್ಪಷ್ಟನೇ. ನನ್ನ ಮನದಲ್ಲಿ ಚಿಲುಮೆಯಂತೆ ಚಿಮ್ಮುವ ಸವಿಯಲಸದಳವಾದ ಅಮೃತ ಸ್ವರೂಪನೇ! ನನಗೆ ಶರಣ ಪದವ ಪ್ರಸಾದಿಸಿದವನೇ. ವಿಕಾರಗಳಿಂದಾವೃತವಾದ ರಕ್ತಮಾಂಸಗಳ ಈ ದೇಹದಲ್ಲಿ ನೆಲೆಸಲಾರೆ. ನನ್ನ ತಂದೆಯೇ. ಶಿವನೇ ಎಂದು ಮೊರೆಯಿಡುತಿರುವೆ. (85)
ಹಲದಿನಗಳು ಮೊರೆಯಿಟ್ಟು, ನಮಸ್ಕರಿಸಿ ನಿನ್ನ ಮಹಿಮೆಯನ್ನು ಹಲಬಾರಿ ಸ್ತುತಿಸಿ ಅಜ್ಞಾನವ ಕಳೆದು ಜ್ಞಾನ ಸ್ವರೂಪವಾದವರು ಮತ್ತೆ ಭುವಿಗೆ ಬಂದು, ಕರ್ಮದ ಫಲವಾಗಿ ಮರುಜನ್ಮ ಪಡೆಯದಂತೆ ಮುಕ್ತಿ ನೀಡಿದವನೇ. ವಂಚನೆಗೈವ ಪಂಚೇಂದ್ರಿಯಗಳಿಗೆ ಅವಾಸವಾಗಿರುವ ದೇಹದ ಬಂಧಪಾಶಗಳನ್ನು ಕಿತ್ತೊಗೆಯಬಲ್ಲವನೇ ನಟ್ಟಿರುಳಿನಲ್ಲಿ ನರ್ತಿಸುವ ನಾಥನೇ! ತಿಲ್ಲೈವನವಿರುವ ಚಿದಂಬರ ಕ್ಷೇತ್ರದಲ್ಲಿ ಪಂಚಕ್ರಿಯೆಗಳ ನರ್ತನ ಗೈದವನೇ! ರಮಣೀಯವಾದ ಪಾಂಡ್ಯ ನಾಡಿನವನೇ (90)
ಭವಬಂಧನದ ವೇದನೆಯ ನೀಗಿಸುವವನೇ ! ಓ ಎಂದು ಮೊರೆಯಿಟ್ಟು ಸ್ತುತಿಸಲು ಶ್ರೇಷ್ಠನಾದವನನ್ನು ಸ್ತುತಿಸುವವರು, ಅವನ ಪವಿತ್ರ ಪಾದಗಳ ಹಾಡಿ ಹೊಗಳಿದ ಗೀತೆಯ ಸಾರವನ್ನರಿತು ಸ್ತುತಿಸುವವರು, ಎಲ್ಲರೂ ಶಿವನಪುರವಾದ ಕೈಲಾಸದಲ್ಲಿ ಅವನ ಪವಿತ್ರಪಾದಗಳ ಬಳಿ ಶಾಶ್ವತವಾಗಿ ನೆಲೆಗೊಳ್ಳುವರು . (95)
ಕನ್ನಡಾನುವಾದ : ಜೆಯಲಲಿದಾ, 2014